Advertisement
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ದೀಪಾವಳಿ ಕವಿತೆ

ಲಿಂಗರಾಜ ಸೊಟ್ಟಪ್ಪನವರ್‌ ಬರೆದ ದೀಪಾವಳಿ ಕವಿತೆ

ಮತ್ತೆ ದೀಪಾವಳಿ ಬಂದಿದೆ

ಒಂದು ದೀಪದ ಕತೆ ಹೇಳಲೆಂದು
ನಾನು
ಕೇಳಲೆಂದು ನೀನು
ದೀಪ ಉರಿಸುತ್ತ ಕೂತಿದ್ದೇವೆ
ದೀಪ ಬೆಳಗುತ್ತಿದೆ ಎಂದು
ಎಲ್ಲರೂ ನಂಬುವ ಹಾಗೆ ನಾವೂ ನಂಬಿದ್ದೇವೆ
ಕಣ್ಣೆದುರೇ ದೀಪವಿದೆ
ಅಲ್ಲೊಂದು ಸತ್ಯವಿದೆ ಅದು ಸ್ಪುಟವಾಗಿದೆ
ದೀಪದಡಿಯ ಕತ್ತಲೆಯಂತೆ

ಕಂಡೂ ಕಾಣದಂತಿರುವ ಎವೆಯಂಚಿನ
ತೇವ
ಜೀವ ಬಾಯಿ ಬಿಟ್ಟು ಹೋದ ಹಾಗಿರುವ
ಭಾವ
ಒಳಗೆಲ್ಲೊ ಬಚ್ಚಿಟ್ಟುಕೊಂಡಿರುವ ಕುದಿ
ಅಮಾಯಕ ಎದೆಯ ಒತ್ತುವ ತಿದಿ
ಒಂದು ನೋಟ ಯಾಮಾರಿಸುವ ಹವಣಿಕೆ

ನಾವಿಬ್ಬರೂ ಅದೆಷ್ಟು ಪರಸ್ಪರರು
ಗೊತ್ತಿದ್ದೂ ಅಮಾಯಕರಂತೆ ನಟಿಸುತ್ತೇವೆ
ಈ ದೀಪ ದೀಪದ ಹುಳುವಿನ ಬಗ್ಗೆ
ನಮಗಿಂತ ಚೆನ್ನಾಗಿ ಇನ್ನಾರಿಗೆ ಗೊತ್ತು

ಒಂದು ಊಫ್ ಗೆ ಹೊಯ್ದಾಡಿ
ನಿನ್ನ ಉಸಿರಿಗೆ ಸಾವರಿಸಿಕೊಂಡು
ಮತ್ತೆ ಮಿಣುಕು ಜೀವ

ಈಗ ಹೇಳು
ನಕ್ಷತ್ರಗಳು ಮಿನುಗುತ್ತವೆಂದು
ಯಾರು ಹೇಳಿದರು

ಉರಿವ ಹೃದಯವನ್ನು
ದೀಪವೆಂದು ಅಪವ್ಯಾಖ್ಯಾನಿಸಬಾರದು
ಪ್ರಿಯ ಸಖಿ
ಯಾರ ಸಂಕಟವೂ ಹೀಗೆ ಸಡಗರವಾಗಬಾರದೆಂದು
ಪ್ರತಿ ದೀಪಾವಳಿಗೂ ಹಲಬುತ್ತೇನೆ

ಮತ್ತೆ ದೀಪಾವಳಿ ಬಂದಿದೆ
ಮತ್ತೆ ಅದೆ ಕತೆ
ಕೇಳಲು ನೀನಿಲ್ಲ
ನಿನ್ನ ದೀಪಾವಳಿಗೆ ಶುಭಾಶಯಗಳು

About The Author

ಲಿಂಗರಾಜ ಸೊಟ್ಟಪ್ಪನವರ್‌

ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರು. ಇವರ ಅನೇಕ ಕಥೆಗಳು ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಹಲವು ಕಥೆಗಳಿಗೆ ಪ್ರಶಸ್ತಿಗಳು ದೊರಕಿವೆ. ಮಾರ್ಗಿ – ಇವರ ಪ್ರಕಟಿತ ಕಥಾ ಸಂಕಲನ. ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ