Advertisement
ಡಾ.ಬೇಲೂರು ರಘುನಂದನ್ ಅನುವಾದಿಸಿದ ಸೌಮ್ಯ ರಾಜ್ ಬರೆದ ಇಂಗ್ಲಿಷ್‌ ಕವಿತೆ

ಡಾ.ಬೇಲೂರು ರಘುನಂದನ್ ಅನುವಾದಿಸಿದ ಸೌಮ್ಯ ರಾಜ್ ಬರೆದ ಇಂಗ್ಲಿಷ್‌ ಕವಿತೆ

ದುಡಿವ ಹೆಣ್ಣು

ನಸುಕಿಗೆ ಏಳಬೇಕು
ಮನೆಯನ್ನು ಸಂಭಾಳಿಸಿ
ಸರಸರನೆ ತಿಂದು
ಬಿರಬಿರನೇ ನಡೆಯಬೇಕು
ಮತ್ತೊಮ್ಮೆ ಯೋಚಿಸು
ನೀನು ದುಡಿಯುವ ಹೆಣ್ಣು

ಅವರಿಗೆ ಇವರಿಗೆ ಮತ್ತು ನಿನಗೆ
ಡಬ್ಬಿ ಕಟ್ಟಬೇಕು
ನಿನಗೆಂದೂ ಇರುವುದಿಲ್ಲ
ಬಿಸಿಬಿಸಿ ಅಡುಗೆ
ಕಡೆದಿಟ್ಟ ಮಜ್ಜಿಗೆ, ವೀಳ್ಯ ತಾಂಬೂಲ
ಆಯಾಸ ಸರಿಸುವ ಸಣ್ಣನಿದ್ದೆ
ಮತ್ತೊಮ್ಮೆ ಯೋಚಿಸು
ನೀನು ದುಡಿಯುವ ಹೆಣ್ಣು

ವ್ಯಾನಿಟೀ ಬ್ಯಾಗಿನಲಿ
ಬಾಚಣಿಗೆ ತುಟಿಯರಂಗು ಕಪ್ಪುಕಾಡಿಗೆ
ಹಣೆಬೊಟ್ಟು ಕೈ ಗಡಿಯಾರ
ಪುಟ್ಟ ಕೈಗನ್ನಡಿಯಿರಲಿ
ಆಪತ್ತಿನ ಬಂಧು ಸ್ಯಾನಿಟರಿ ಪ್ಯಾಡುಗಳನು
ಮರೆಯಲೇಬೇಡ
ಮತ್ತೊಮ್ಮೆ ಯೋಚಿಸು
ನೀನು ದುಡಿಯುವ ಹೆಣ್ಣು

ಮರೆಯುವಂತಿಲ್ಲ
ಅಡುಗೆ ಬೇಯಿಸುವುದು
ಹಿರಿಯರನ್ನು ಗೌರವಿಸುವುದು
ಮಕ್ಕಳಿಗಾಗಿ
ಒಂದಷ್ಟು ಸುಸಮಯ ಕೊಡಲೇಬೇಕು
ತಪ್ಪಿಸುವಂತಿಲ್ಲ
ಇನಿಯನ ಜೊತೆಗಿನ ಸರಸ ಸಲ್ಲಾಪಗಳನು
ಮತ್ತೊಮ್ಮೆ ಯೋಚಿಸು
ನೀನು ದುಡಿಯುವ ಹೆಣ್ಣು

ಅರುಚಲೇ ಬಾರದು ಹಡೆದ ಮಕ್ಕಳೆದುರು
ಪ್ರಕಟಿಸಬಾರದು ಅಹಂ
ಲೋಕದೆದುರು ಎಂದಿಗೂ
ಸಭ್ಯವಾಗಿರಲೇಬೇಕು ಸಹುದ್ಯೋಗಿಗಳೊಂದಿಗೆ
ಮನೆಗೆ ಬರುವ ಅತಿಥಿಗಳಿಗೆ
ಬೇಡ ಎನ್ನುವಂತಿಲ್ಲ
ಅತ್ತೆ ಮಾವನಿಗೆ ಮಾರುತ್ತರ
ನೀಡುವ ಬಾಬತ್ತಿಲ್ಲ
ಮತ್ತೊಮ್ಮೆ ಯೋಚಿಸು
ನೀನು ದುಡಿವ ಹೆಣ್ಣು

ಮೇಲಿನ ಪಟ್ಟಿಯನ್ನು ಪಾಲಿಸಿದರೆ
ನೀನು ಅಪ್ಪಟ ಹೆಣ್ಣು
ಇಲ್ಲವೇ
ಶಿಸ್ತಿಲ್ಲದವಳು, ದುರಹಂಕಾರಿ, ಸ್ವಾರ್ಥಿ
ನಾಜೂಕಿಲ್ಲದವಳು, ಕೆಟ್ಟತಾಯಿ
ತೃಪ್ತಿಗೊಳಿಸಲಾಗದ ಹೆಂಡತಿ
ಇನ್ನೂ ಏನೇನು ಪಟ್ಟಕಟ್ಟಬಹುದು

ಮತ್ತೊಮ್ಮೆ ಯೋಚಿಸು
ದುಡಿವ ಹೆಣ್ಣು ನೀನು
ನಿನ್ನನ್ನು ಕುರಿತು
ಇನ್ನೂ, ಏನೆಲ್ಲಾ ಹೇಳಬಹುದು

 

ಸೌಮ್ಯ ರಾಜ್ ಮೂಲತಃ ಭದ್ರಾವತಿಯವರು.
ಸದ್ಯ ಬೆಂಗಳೂರಿನ ಕಾಲೇಜೊಂದರಲ್ಲಿ ಆಂಗ್ಲ ಭಾಷಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅನುವಾದ ಹಾಗೂ ಕಾವ್ಯ ರಚನೆ ಇವರ ಪ್ರವೃತ್ತಿ.

About The Author

ಬೇಲೂರು ರಘುನಂದನ್

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿ, ಎಂ.ಫಿಲ್ ಪದವಿಯನ್ನುಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದು ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ. 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಗೊಂಡ ಬೇಲೂರು ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆಗ್ರಂಥ ಬಹುಮಾನ, ಸಾಲು ಮರದತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ