Advertisement
ಮಯೂರ ಬಿ ಮಸೂತಿ ಬರೆದ ಈ ದಿನದ ಕವಿತೆ

ಮಯೂರ ಬಿ ಮಸೂತಿ ಬರೆದ ಈ ದಿನದ ಕವಿತೆ

ಖಾಲಿ ಖಯಾಲಿಗಳು

ಸುಮ್ಮನೆ ಕುಳಿತಿದ್ದೆ,
ಮೌನ ಕೇಳಿತು
ನನ್ನನೇಕೆ ಮರೆತಿದ್ದಿಯೆಂದು?
ನಿನ್ನ ಮರೆತಿದ್ದರೆ
ಸುಮ್ಮನೇಕೆ ಕುಳಿತಿರುತ್ತಿದ್ದೆನೆಂದೆ
ಮೌನ ಮೌನವಾಗಿ ಮರೆಯಾಯಿತು.
ನಾನೀಗ ಏಕಾಂಗಿ…

ಆಕಾಶದಲ್ಲಿರುವ
ನಕ್ಷತ್ರಗಳ ಎಣಿಸಲು
ಪ್ರಯತ್ನಿಸುತ್ತಿದ್ದೆ,
ನಕ್ಷತ್ರಗಳು ಮರೆಯಾಗಿ
ಈಗ ಎಣಿಸು ನೋಡೋಣ?
ಎಂದು ಕೆಣಕಿದವು.
ನನ್ನ ತಲೆಯ ಕೂದಲುಗಳನ್ನು
ಎಣಿಸಲು ಶುರುಮಾಡಿದೆ
‘ಅಜ್ಜಿಯ ಕಾಲದ ಹುಡುಗ’ನೆಂದು
ನಕ್ಷತ್ರಗಳು ನಕ್ಕವು..

ಕವಿತೆ ಬರೆಯಲೆಂದುಕೊಂಡೆ
ಸಾಲುಗಳನು ಗೀಚಿದೆ
ಅಕ್ಷರಗಳು ಹಾಳೆಯ ಮೇಲೆ ಮೂಡಿದವು
ಮನಸ ಮೇಲೆ ಮೂಡಲಿಲ್ಲ
ಹಾಳೆ ಮಡಚಿ ಬಿಸಾಡಿದೆ.
‘ಅಕ್ಷರಗಳಿಂದ ಪದ
ಪದಗಳಿಂದ ಸಾಲುಗಳು
ಸಾಲುಗಳಿಂದ ಕವಿತೆ
ಕವಿತೆಯೊಂದು ಭಾವ
‘ಭಾವ’ ಜೀವದ ಮೂಲವೆಂದು
ರೋದಿಸಿದವು ಅಕ್ಷರಗಳು.
ಕಾಗದವ ತೆರೆದು ಸಾಲುಗಳ
ಮತ್ತೊಮ್ಮೆ ಓದಲು ಶುರುಮಾಡಿದೆ
ಅಕ್ಷರಗಳು ಉಸಿರಾಡಿದವು..

ಮಧುಶಾಲೆಯಲಿ ಕುಳಿತಿದ್ದೆ,
ಮಧುಪಾನ ಮಾಡಲೆಂದಲ್ಲ;
ಮಧುಪಾನ ಮಾಡುವವರ
ಕೆಣಕಲೆಂದು.
‘ಎಲೈ ಮಧುಪಾನಿಗಳೇ,
ಹೂವಿನಿಂದ ಹೂವಿಗೆ
ಹಾರುವ ದುಂಬಿಗಳಂತೆ,
ಬಾರಿನಿಂದ ಬಾರಿಗೆ
ಹೋಗುವ ನಿಮಗೂ ನಮಗೂ
ಇರುವ ವ್ಯತ್ಯಾಸವಾದರು ಏನು?’
ಸವಾಲನೆಸೆದೆ ಕುಹುಕದಿಂದ.
‘ನೀವು ಪರಪಂಚದೊಳಗೆ,
ಪರಪಂಚ ನಮ್ಮೊಳಗೆ’ ಎಂಬ
ಮಧು ಪಾನಿಗಳ ಜವಾಬಿಗೆ
ಸೀಸೆ, ಗಿಲಾಸುಗಳಲ್ಲಿದ್ದ ಶರಾಬು
ಆನಂದದಿಂದ ತುಳುಕಾಡಿತು…

About The Author

ಮಯೂರ ಬಿ ಮಸೂತಿ

ಬಾಗಲಕೋಟೆ ಮೂಲದ ಮಯೂರ ಬಿ ಮಸೂತಿ ಸಾಫ್ಟವೇರ್ ಇಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಸಣ್ಣ ಕಥೆ, ವೈಜ್ಞಾನಿಕ ಕಥೆಗಳನ್ನು ಹಾಗು ಪ್ರಬಂಧ ಬರೆಯುವುದು ಇವರ ಹವ್ಯಾಸ. ಇವರ ಸಣ್ಣ ಕಥೆಗಳು, ಹಲವಾರು ಪ್ರಬಂಧಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ