Advertisement
ಲಕ್ಷ್ಮಿಕಾಂತ ಮಿರಜಕರ ಬರೆದ ಈ ದಿನದ ಕವಿತೆ

ಲಕ್ಷ್ಮಿಕಾಂತ ಮಿರಜಕರ ಬರೆದ ಈ ದಿನದ ಕವಿತೆ

ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ

ಮಾಯೆಯಿಂದ ಜನಿಸಿ
ಮಾಯೆಗೆ ಮೋಹಿತನಾಗಿ
ಮಾಯೆಯ ಉತ್ಪತ್ತಿಗೆ ಬೀಜವಾಗುವ
ಮಾಯಾಲೋಲನೆಂಬ ಮಾನವ
ಬಾಹ್ಯಲೋಕದಲ್ಲಿ
ಹೆಣ್ಣು ಹೊನ್ನು ಮಣ್ಣುಗಳೆಂಬ ತ್ರಿವಿಧ ರೂಪದ ಮಾಯೆಯಲ್ಲಿ ಬಂಧನ
ಆಂತರ್ಯ ಲೋಕದಲ್ಲಿ
ಅರಿಷಡ್ವರ್ಗಗಳ ರೂಪದ
ಮಾಯೆಯ ಅಂಕೆಯೊಳಗೆ ಬಂಧನ

ಮಾನವನ ಭವಿಯ ಬದುಕಿನ
ಲಿಖಿತ ಬರೆಯುವುದು ವಿಧಿಯ ನಿಯಮ
ಲಗ್ನ ವಿಘ್ನ, ಒಳಿತು ಕೆಡುಕು
ಕತ್ತಲು ಬೆಳಕು, ಸುಖ ದುಃಖಗಳೆಂಬ
ದ್ವಂದ್ವಗಳನ್ನು
ಜೀವನವೆಂಬ ಹಾಳೆಯಲ್ಲಿ ಬರೆಯುವುದು
ಮಾಯೆಯ ಕೈಯಲ್ಲಿನ ಲೇಖನಿ

ಸ್ವರ್ಗ ನರಕ ಮೋಕ್ಷ ಸಿಗುವುದು ಸತ್ತ ಬಳಿಕ
ಎಂಬ ಮೂರ್ಖ ನಂಬಿಕೆಯಲ್ಲಿ
ಬಾಳುತ್ತಾನೆ
ಇಹಲೋಕದ ಬದುಕೆಲ್ಲವನ್ನೂ ಪರಲೋಕದ ಸಿದ್ಧತೆಗಾಗಿ

ಕೊಟ್ಟ ಕುದುರೆಯನ್ನು ಏರದೇ ಮತ್ತೊಂದು ಕುದುರೆ ಬಯಸಿ ಹೊರಡುತ್ತಾನೆ
ಕಂಡುದ ಹಿಡಿಯಲೊಲ್ಲದೆ ಕಾಣುದುದನರಸಿ ತೆರಳುತ್ತಾನೆ
ಭ್ರಾಂತ ಹುಸಿಯನ್ನೇ ನಿಜವೆಂದುಕೊಂಡು
ಆತ್ಮವಂಚನೆಯೆಂಬ ಆತ್ಮಹತ್ಯೆ ಮಾಡಿಕೊಂಡು

ಸುತ್ತಿ ಸುತ್ತಿ ಅಲೆದು
ಕೊನೆಗೊಂದು ದಿನ ತನ್ನ ಮೂಳೆಗಳನ್ನು
ಧರೆಗೆ ಅರ್ಪಿಸಿ ಮರೆಯಾಗುತ್ತಾನೆ
ಮನುಷ್ಯ
ತಿರುಗಿ ತಿರುಗಿ ಕೊನೆಗೆ
ತನ್ನ ಶಕ್ತಿಯನ್ನು ಕಳೆದುಕೊಂಡು
ಸೋತು ನೆಲಕ್ಕೆ ಬೀಳುವ
ಬುಗುರಿಯಂತೆ

ಬದುಕೆಂಬ ಬುಗುರಿಯ ವೇಗ
ತಿರುಗುವ ಕಾಲ
ತೀರ್ಮಾನಿಸೋದು ಪ್ರಕೃತಿ
ಮನುಷ್ಯ
ಪ್ರಕೃತಿ ತಿರುಗಿಸುವ ಬುಗುರಿ
ಅಷ್ಟೇ!

ಲಕ್ಷ್ಮಿಕಾಂತ ಮಿರಜಕರ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವದವರು.
ʼಚಿಲುಮೆʼ ಇವರ ಪ್ರಕಟಿತ ಕೃತಿ.. “ಬಯಲೊಳಗೆ ಬಯಲಾಗಿ”ಗಜಲ್ ಸಂಕಲನ ಅಚ್ಚಿನಲ್ಲಿದೆ.
ಸದ್ಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ