Advertisement
ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ಬೆಳಕ ಮಾರ ಬಂದವರು……!!

ಮಠದ ಅಂಗಳದಲ್ಲಿ ಹೂವು
ಅರಳುವುದ ನಿಷೇಧಿಸಿದ್ದೇವೆ…!

ಯಾಕಾಗಿ ಗೊತ್ತೇ…?

ಸೂರ್ಯ ಬೆತ್ತಲಾಗುವದ
ಕಲಿತಿದ್ದಾನಂತೆ…!!
ವೇಷ ತೊಟ್ಟಷ್ಟು
ಕುದುರೆಗೆ ಲಗಾಮು ತೊಡಿಸುವುದು
ಈಗ ಸರಳವಲ್ಲವಂತೆ..!!

ಮಠದ ಪಡಸಾಲೆಯಲ್ಲಿ ಚಿಟ್ಟೆ
ಹಾರುವದ ನಿಷೇಧಿಸಿದ್ದೇವೆ….!

ಯಾಕಾಗಿ ಗೊತ್ತೇ….?

ಅಂಗಾಂಗಕ್ಕೆಲ್ಲ ವಿಭೂತಿ ಬಳಿದು
ಪೀಠಕ್ಕೆ ಸುತ್ತಲೂ ಭಸ್ಮ ಎಳೆದು
ತೊಟ್ಟಿಕ್ಕುವ ಎಣ್ಣೆ ಗಾಣಕೆ
ಜಗಕೆ ಮುಸುಕು ತೊಡಿಸಿಯಾದರೂ
ಪಂಜು ಹಿಡಿವ ಆಸೆಯಂತೆ…!!
ಕತ್ತಲೆಗಾಗಿ ಕಾಯುವ
ಕಾಯವನ್ನೇ ಪಡೆದವರಂತೆ….!!

ಮಠದ ಕೊಳದಲ್ಲಿ
ಕಮಲವರಳದಂತೆ ನಿಷೇಧಿಸಿದ್ದೇವೆ…!

ಯಾಕಾಗಿ ಗೊತ್ತೇ….?

ತೊಡೆ ಹರಿದು ಪಾದುಕೆ
ಮಾಡಿದವರ ಪಾದ ಕಮಲಗಳಿಗೆರಗಿದವರ
ಹಾಡಿಗೆ ಬಂದವರು
ಹಾದರ ಮಾಡಿರುವರಂತೆ…!!

ಮಠದ ಕೋಣೆಗೆ
ಕತ್ತಲ ಸೆರಗ ಹಾಸಿ ಮೆತ್ತಗೆ
ಬೆಳಕ ನಿಷೇಧಿಸಿದ್ದೇವೆ…!

ಯಾಕಾಗಿ ಗೊತ್ತೇ…?

ಮುಖಕ್ಕೆ ಮುಖ ಕಾಣುವ
ಪ್ರೇಮವಲ್ಲದ ಕಾಮ ಕೇಳಿಗೆ
ಕಣ್ಣು ಕುರುಡೆoಬ ಗಾದೆಯೇ ಇದೆಯಂತೆ….!!

ಬೆಳಕು ಹರಿದರೆ ಹಾದರ
ಮತ್ತೆ…
ಕಮಂಡಲವಿಡಿದು ವಿಭೂತಿ ಬಳಿದು
ನಶ್ವರದ ಈಶ್ವರನ….
ಕಿಸೆ ತುಂಬಿ….
ತುದಿ ನಾಲಿಗೆಯಲಿ ಜಪಿಸುವುದಿದೆಯಂತೆ….!!

ಹೆಚ್ಚೇನಲ್ಲ ಇಷ್ಟೇ ….!

ಬೆಚ್ಚಿ ಬೀಳದಿರಿ…

ಪ್ರವಚನ…..ಉಪದೇಶ…. ಸತ್ಸಂಗ….!!

ಏನೇನೋ ಸತ್ತವರ
ಸಂಗ ಇನ್ನೂ ಇದೆಯಂತೆ….!!
ಬೆಳಕ ಮಾರಲು ಬಂದವರ
ಹೃದಯ ಕತ್ತಲೆಯಲಿ ಮುಳುಗಿದೆಯಂತೆ…..!!
ಇಂಚಿಂಚು ಇಷ್ಟಿಷ್ಟೇ…!!

ದೇವರಾಜ್‌ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಅಗಸ್ತ್ಯ

    ಕವಿತೆ ಹರಿತವಾಗಿ ಹರಿದಿದೆ..!
    ಹರಿಯಲಿ.. ನಿಷೇಧವಾಗದೇ ಇರಲಿ!!

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ